Wednesday, June 1, 2011

ದ್ವಂದ್ವ ?


ರವಿವಾರ .ಮೇ 28 2011 .ಸಮಯ ಬೆಳಿಗ್ಗೆ 06 . 
ಯಾಕೋ ಎಚ್ಚರವಾಯ್ತು. ಯಾವತ್ತೂ 6 .30 ಕ್ಕಿಂತ ಮುಂಚೆ ಎಚ್ಚರವಾಗಿದ್ದಿಲ್ಲ. ಕಿಬ್ಬೊಟ್ಟೆಯ ಆಳದಲ್ಲೆಲ್ಲೋ ನೋವಿರುವಂತೆನಿಸಿತು. ಬೆಳಿಗ್ಗೆ ಒಂದು ರೌಂಡ್  ವಾಕ್ ಹೋದರೆ ಸ್ವಲ್ಪ ನೆಮ್ಮದಿಯೇನ್ನಿಸಬಹುದೇನೋ ಎಂತೆನಿಸಿತು. ಹಳೆಯ  ದೊಗಲೆ ಟಿ- ಶರ್ಟ್ ಮತ್ತು  ಪೈಜಾಮ ಧರಿಸಿದವನೇ, ದೊಡ್ಡ ಬಿಲ್ಡಿಂಗಿನ ಬೇಸ್ ಮೆಂಟಿನಲ್ಲಿರುವ ನನ್ನ ಚಿಕ್ಕ ರೂಂನಿಂದ ಹೊರಬಿದ್ದೆ. 

ಗುರುವಾರ . ಎಪ್ರಿಲ್  5 2007 . ಸಮಯ ಬೆಳಿಗ್ಗೆ 11 .30 .
ದರಿದ್ರನಾರಾಯಣನ ಹಾಗೆ ಮಂಚದ ಮೇಲೆ ಬಿದ್ದವನ ಕೈಯಲ್ಲಿ ಹಳೆಯ ದಿನಪತ್ರಿಕೆಯ ಪುರವಣಿಯೊಂದಿತ್ತು. ಕಿವಿಯಲ್ಲಿ ಅಮ್ಮನ ಸುಪ್ರಭಾತದ ನಿನಾದವಿತ್ತು. ನಾನು ಡಿಗ್ರಿ ಮುಗಿದ ಮೇಲೆಯೂ ಕೆಲಸ ಸಿಗದಿದ್ದಕ್ಕೆ ಅಮ್ಮನಿಗೊಂದು ನೋವಿತ್ತು. ಈಗಾದರೂ ಬಡತನದ ಕುಟುಂಬಕ್ಕೆ ನಾನು ಸಹಾಯವಗುತ್ತೆನೆಂದು ಎನಿಸಿದ್ದ ಅಮ್ಮನಿಗೆ , ನನ್ನ ಪ್ರಾಮಾಣಿಕತೆ ಅಸಮಾಧ್ಹಾನ ತಂದಿತ್ತು. ಪೋಸ್ಟ್ ಮ್ಯಾನ್ ರಂಗಪ್ಪ ಎಸೆದ ಪತ್ರವನ್ನು ಅಮ್ಮ ಕೆಮ್ಮುತ್ತಲೇ ನನ್ನ ಕೈಯಲ್ಲಿ ತಂದು ತುರುಕಿದಳು. ಕಾಗದ ತುಮಕೂರಿನ ಖಾಸಗಿ ಕಾಲೇಜಿನಿಂದ ಬಂದಿದ್ದರಿಂದ ಸ್ವಲ್ಪ ಕುತುಉಹಲದಿಂದ ಹರಿದು ಓದಿದೆ. ಕಾಗದ ಓದಿ ಮುಗಿಸುವ ಹೊತ್ತಿಗೆ ನನ್ನ ಮುಖದಲ್ಲಿ ಮುಗುಳ್ನಗೆಯೊಂದು ಮೂಡಿತ್ತು . ಅಮ್ಮನ ಹುಬ್ಬುಗಳು ಕುತೂಹಲದಿಂದ ಗಂಟಾಗಿದ್ದವು. ಕೊನೆಗೂ ನಾನು ಕನ್ನಡದ ಅಧ್ಯಾಪಕನಾಗಿದ್ದೆ. ಅಮ್ಮನಿಗೆ ಇದರಿಂದ ಖುಷಿಯಾಗಿದ್ದರೂ , ಸಂಬಳ ಮತ್ತು ಸ್ವಲ್ಪ ದುಉರದ ಸ್ಥಳವಾದ್ದರಿಂದ ಬೇಸರವಾಗಿತ್ತು

ಶುಕ್ರವಾರ . ಅಕ್ಟೋಬರ್ 2 2009  ಸಮಯ ಬೆಳಿಗ್ಗೆ 9 
ಗಾಂಧಿ ಜಯಂತಿಯ ಪ್ರಯುಕ್ತ ಕಾಲೇಜಿನಲ್ಲೊಂದು ಪುಟ್ಟ ಕಾರ್ಯಕ್ರಮ. ಡಿಗ್ರಿ ಮೊದಲ್ನೇ ವರ್ಷದ ಹುಡುಗನೊಬ್ಬ ತನ್ನ ಭಾಷಣದಲ್ಲಿ ನನ್ನನ್ನು ಗಾಂಧಿಗೆ ಹೋಲಿಸಲು ಪ್ರಯತ್ನಿಸಿದ್ದ. ಕಾಲೇಜಿನಲ್ಲಿ ನಾನೊಬ್ಬ ಸಭ್ಯ, ಸಜ್ಜನ, ಮತ್ತು ಪ್ರಾಮಾಣಿಕ ಅಧ್ಯಾಪಕನಾಗಿದ್ದೆ.ನಾನು ಮತ್ತೊಬ್ಬ ಗಂಧಿಯೇನೋ ಅಂದೆನಿಸಿ ಉಬ್ಬಿಹೊಗಿದ್ದೆ.

ಮಂಗಳವಾರ . ಮೇ 1, 2001. ಮಧ್ಯಾಹ್ನ 12.45 
ಕಾರ್ಮಿಕ ದಿನಾಚರಣೆಯ ಅಂಗವಾಗಿ ಊರಿನ ಕ್ರೀಡಾಂಗಣದಲ್ಲಿ ಕಾರ್ಯಕ್ರಮವೊಂದು ಏರ್ಪಟ್ಟಿತ್ತು. ಕಾರ್ಮಿಕ ಸಚಿವ ವೀರೇಶ್ ಗುರಾಣಿ ಯವರು ಕಾರ್ಯಕ್ರಮದ ಅತಿಥಿಯಾಗಿದ್ದರು. ಕಾರ್ಯಕ್ರಮದ ನೂಕುನುಗ್ಗಲಿನ ನಡುವೆ ಅಪ್ಪನಿಗೆ ಹೃದಯಾಘಾತವಾಗಿತ್ತು. ಅಪ್ಪ ಕಾರ್ಮಿಕರ ದಿನದಂದು ಶವವಾಗಿದ್ದ. ಅಪ್ಪನ ಅಕಾಲ ಮರಣದಿಂದ ನಾನು ಸೈನ್ಸ್ ಬಿಟ್ಟು ಆರ್ಟ್ಸ್ ಓದುವಂತಾಯಿತು. 

ರವಿವಾರ .ಮೇ 28 2011 .ಸಮಯ ಬೆಳಿಗ್ಗೆ 06.30.
ನಾನು ಈ ಎಲ್ಲ ಗುಂಗಿನಿಂದ ಹೊರಬಂದು ನೋಡಿದಾಗ ನನ್ನ ರೂಮಿದ್ದ ಬಿಲ್ಡಿಂಗಿನ ಮುಂದಿದ್ದೆ. ಸೀದ ಬೇಸ್ ಮೆಂಟಿನಲ್ಲಿರುವ ನನ್ನ ರೂಮಿಗೆ ತೆರಳುವದನ್ನು ಬಿಟ್ಟು ನೆಲ ಅಂತಸ್ತಿನಲ್ಲಿರುವ ಚಿಕ್ಕ ಕೋ-ಅಪರೇಟಿವ್ ಬ್ಯಾಂಕ್ನತ್ತ ದೃಷ್ಟಿ ಹರಿಸಿದೆ. ಅಸಹಜವಾದ ಸಂಗತಿಯೊಂದನ್ನು ಗಮನಿಸಿದೆ. ಬ್ಯಾಂಕಿನ ಕೀಲಿ ಕೈ ಬಾಗಿಲಿನಲ್ಲೇ ನೇತಾಡುತ್ತಿತ್ತು. ಮೈ ಕೈ ಎಲ್ಲ ಬೆವರತೊಡಗಿದವು.ಅರ್ಧ ಗಂಟೆಯ ಹಿಂದೆ ನೆನಪಾದ ಹಳೆಯ ನೆನಪುಗಳು ಮತ್ತೆ ನೆನಪಾದವು. ಎಲ್ಲವು ಕಲಸು ಮೇಲೋಗರ. ಆದರ್ಶಗಳೆಲ್ಲ ಉಪ್ಪು ಸಾಗರ. ತಕ್ಷಣವೇ ಕಟ್ಟಡದ ಒಳ ನಡೆದೆ. ಹೃದಯ ಬಾಯಿಗೆ ಬಂದಂತಾಗಿತ್ತು. ಕಟ್ಟಡವೆಲ್ಲಾ ಖಾಲಿ. ಒಂದು ಖುರ್ಚಿಯೂ ಇಲ್ಲ. ನನ್ನ ಎದೆ ಬಡಿತ ನನಗೆಯೇ ಕೇಳಿಸುತ್ತಿತ್ತು. ಅಂಜಿಕೆಯಿಂದ ಕಟ್ಟಡ ಕಂಪೌಂಡಿನಿಂದ ಹೊರ ಓಡಿಬಂದೆ. ಕಾಲುಗಳು ಸಣ್ಣಗೆ ನಡುಗುತ್ತಿದ್ದವು.ಯಾರಾದರೂ ನನ್ನನ್ನು ಗಮನಿಸಿದರೆ ಎಂದು ಸುತ್ತಲು ಕಣ್ಣು ಹಾಯಿಸಿದೆ, ಮೊದಲನೇ ಮಹಡಿಯ ಕಿಟಕಿಯ ಪಕ್ಕದಲ್ಲಿದ್ದ ಬೋರ್ಡ್ ಒಂದು ಗಮನ ಸೆಳೆಯಿತು . ಅದರಲ್ಲಿದ್ದುದು  ಇದು - TO LET, Office/ Commercial Space Contact : 98x0198x01. ನನ್ನ ಆದರ್ಶದ ಮುಖವಾಡ ಕಳಚಿ ಬಿದ್ದಿತ್ತು. ನನ್ನಲ್ಲೊಬ್ಬ ಸತ್ತಿದ್ದ.   




Tuesday, May 31, 2011

ಸೀರೆ

"ಛೆ ! ಈ  ದೀಪಾವಳಿಯೂ ಹೀಗೆ ಕಾಡಬೇಕಾ? ಇನ್ನೂ ನಾಲ್ಕು ದಿನ ತಡವಾಗಿ ಬಂದಿದ್ದರೆ ಏನಾಗ್ತಿತ್ತು? ಅಕ್ಟೋಬರ್ 27    ರಂದು ದೀಪಾವಳಿ.ಇವತ್ತಿಗೆ ಆರು ದಿನ ಇದೆ. ಸಂಬಳ ಬರೋದಕ್ಕೆ ಹತ್ತು ದಿನ ಬಾಕಿ. ಕೈಯಲ್ಲಿರೋದು 3500 ರೂ. ದಿನಕ್ಕೆ ನೂರು ರೂಪಾಯಿಯಂತೆ ಖರ್ಚಿಗಿಟ್ಟುಕೊಂಡರೂ 2500 ರೂ ಗಳವರೆಗೆ ಸೀರೆ ತಗೋಬಹುದು. ಆದರೆ ಆ ನಿರ್ಮಲ ದಸರೆಗೆ ಉಟ್ಟಂತಹ ಸೀರೆ ತಗೋಬಹುದಾ. ಇಷ್ಟಕ್ಕೂ ಅವಳ ಸೀರೆ ಬೆಲೆ ನಾನು ಕೇಳಲೇ ಇಲ್ಲ. ಇರಲಿ , ಧೈರ್ಯ ಮಾಡಿ ತಗೊಂಡೆ ಬಿಡೋಣ" ಅಂದುಕೊಂಡೆ. ನನಗೆ ನಿರ್ಮಲಳ ಸೀರೆಗಿಂತ ಅವಳ ಮೊನಚು ನೋಟ ನನ್ನನ್ನು ಕುಕ್ಕಿತ್ತು. ಕೈಯಲ್ಲಿರೋ ಗಡಿಯಾರ ಸಮಯ 5 :40   ನ್ನು ತೋರಿಸುತ್ತಿತ್ತು, ನಮ್ಮ ಬಾಸ್ ನ  ಹುಬ್ಬುಗಳ ಥರ . ನಾನು ಹೊಸ ಹುಮ್ಮಸ್ಸಿನೊಂದಿಗೆ ಚಿಕ್ಕಪೇಟೆ ಒಳ ಹೂಕ್ಕಿದ್ದೆ. ಎಲ್ಲ ಅಂಗಡಿಗಳೂ ಗೌಜು ಗದ್ದಲಗಳಿಂದ ತುಂಬಿದ್ದವು.ಎಲ್ಲೆಲ್ಲೂ ಖರೀದಿಯ ಸಂಭ್ರಮ. ನನಗೆ ಗೊತ್ತಿರುವಂತೆ , ಇದೇ ಮೊದಲ ಸಲ ನಾನು ಒಬ್ಬಳೇ ಸೀರೆ ತರಲು ಹೊರಟಿದ್ದು. ಕೊನೆಗೂ ನಿರ್ಮಲಳ ಸೀರೆಯಂತಹ ತರಹದ ಸೀರೆಯನ್ನುಟ್ಟ ಬೊಂಬೆಯೊಂದು  ನನ್ನ ಕಣ್ಣು ಕುಕ್ಕುವಲ್ಲಿ  ಯಶಸ್ವಿಯಾಗಿತ್ತು .ಚಕ್ಕನೆ ಅಂಗಡಿಯ ಒಳ ಹೊಕ್ಕೆ. ನಿರ್ಮಲದು ತಿಳು ನೀಲಿ ಸೀರೆ. ನಾನೂಅದೇ ಬಣ್ಣದ್ದು ತಗೊಂಡ್ರೆ ಚೆನ್ನಾಗಿರೊಲ್ಲ ಎನ್ನಿಸಿತು. ಅದಕ್ಕೆ, ಕೊನೆಗೂ ಕನಕಾಂಬರ ಬಣ್ಣದ ಸೀರೆ ಇಷ್ಟವಾಯ್ತು. ಸೀರೆಯ ಅಂಚಿನಲ್ಲಿರುವ ಹಂಸಗಳನ್ನು ನನಗಾಗಿಯೇ ಬಿಡಿಸಿದಂತಿತ್ತು, ಆಹ್! ಸೀರೆಯ ತುದಿಯಲ್ಲಿದ್ದ ಪ್ರೈಸ್ ಟ್ಯಾಗ್ ನನ್ನ ಉತ್ಸಾಹಕ್ಕೆ ತಣ್ಣೀರೆರಚಿತ್ತು. ಬೆಲೆ 3000 ರೂ.ಚೌಕಾಶಿ ಮಾಡಲು ಪ್ರಯತ್ನಿಸಿದೆ. ಅಂಗಡಿಯವನು ಹೇಳಿದ್ದು ,'' ಸೀರೆ ಫಿಕ್ಸ್ ರೇಟ್. ಸೀರೆ ಜೊತೆಗೆ ಲಕ್ಕಿ ಕೂಪನ್ ಬರುತ್ತೆ. ದೀಪಾವಳಿ ದಿನ ಲಕ್ಕಿ ಡಿಪ್ ಇರುತ್ತೆ. ಅದರಲ್ಲಿ ನಿಮ್ಮ ನಂಬರ್ ಬಂದ್ರೆ ಸೀರೆಯ ಅರ್ಧ ಬೆಲೆ ವಾಪಸ್. ಆ ಥರ 100 ಜನರಿಗೆ ಬಹುಮಾನ ಗ್ಯಾರಂಟಿ.ಲಕ್ಕಿ ಡಿಪ್ ವಿಜೇತರನ್ನ ಮಾರನೇ ದಿನದ ಪ್ರಮುಖ ಪತ್ರಿಕೆಗಳಲ್ಲಿ ಘೋಷಿಸಲಾಗುತ್ತೆ".ಕೊನೇಗೂ ಧೈರ್ಯ ಮಾಡಿ ಪ್ಯಾಕ್ ಮಾಡಲು ಆದೇಶಿಸಿದೆ . ಇತ್ತ ಅಂಗಡಿಯ ಮಾಲೀಕನಿಗೆ ಹಣ ತೆತ್ತು ರಸೀದಿ ಮತ್ತು ಲಕ್ಕಿ ಕೂಪನ್ ಇಸಿದುಕೊಂಡೆ. ಕುತೂಹಲ ತಡೆಯಲಾರದೆ ಲಕ್ಕಿ ಕೂಪನ್ ನಂಬರ್ ನೋಡಿದೆ. R58325 .ಅರೆ , ಈ ನಂಬರ್ ಎಲ್ಲೂ ನೋಡಿದ ಹಾಗಿದೆಯಲ್ಲ ಅಂತನ್ನಿಸಿತು, ಚಕ್ಕನೆ ನೆನಪಾದದ್ದು ನನ್ನ ಡಿಗ್ರಿ ಪರೀಕ್ಷೆಯ ನಂಬರ್. ಅದು CO58352 . ನನ್ನ ಪರೀಕ್ಷೆಯ ಫಲಿತಾಂಶ ಗಳೆಲ್ಲ ಕಣ್ಣ ಮುಂದೆ ಹಾದುಹೋದಂತಾಯಿತು. ಯಾಕೋ ಸೀರೆ ಮತ್ತು ಲಕ್ಕಿ ಕೂಪನ್ ಎರಡೂ ಬೇಡವೆನಿಸತೊಡಗಿದವು.ಹಾಗೂ ಹೀಗೂ ಮನಸ್ಸ್ಸನ್ನು ಸಿದ್ಧಗೊಳಿಸತೊಡಗಿದೆ. ಸೀರೆ ಇಲ್ಲದೆ ದೀಪಾವಳಿ ಆಚರಿಸೋಕೆ ಆಗಲ್ವ ಎಂದೆನಿಸಿತು.ನಿರ್ಮಲಳ ಮೇಲಿನ  ಅಸೂಯೆಗೆ ನಾನ್ಯಾಕೆ ಸೀರೆ ತಗೋಬೇಕು ಎಂದೆನ್ನಿಸಿತು  ತಕ್ಷಣವೇ ಸೀರೆ ಖರೀದಿ ಕ್ಯಾನ್ಸಲ್ ಮಾಡಿಸಿದೆ. ಅಂಗಡಿ ಮಾಲೀಕ ನನ್ನ ಸಹಸ್ರನಾಮ ಶುರು ಮಾಡಿದ. ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ , ನಿರುಮ್ಮಳವಾಗಿ ಮನೆಯ ದಾರಿ ಹಿಡಿದೆ. 3000 ರೂ ನನ್ನ ಪರ್ಸ್ ನಲ್ಲಿ ಭದ್ರವಾಗಿತ್ತು. ಮನಸ್ಸಿನಲ್ಲೊಂದು ಸಮಾಧಾನ ಮೂಡಿತ್ತು. ಸೀರೆ ಮರೆತುಹೋಗಿತ್ತು. 
ಅಕ್ಟೋಬರ್ ೨೯ ರ ಪ್ರಜಾವಾಣಿಯಲ್ಲಿ ದೀಪಾವಳಿಯ ವಿಶೇಷ ಕಥೆಗಳ ಕೆಳಗೆ ಬಾಲಾಜಿ ಸೀರೆ ಅಂಗಡಿಯ ಲಕ್ಕಿ ಡ್ರಾ ನಂಬರ್  ಗಳ 10 ಸಾಲುಗಳಿದ್ದವು. ಅದರ 6 ನೇ ಸಾಲಿನ 8 ನೇ ನಂಬರ್  R58325 ಆಗಿತ್ತು.

Monday, June 7, 2010

ನ್ಯಾನೋ ಕತೆಗಳು

-4-
ಘೋರ ಬರಗಾಲ.ಊರೆಲ್ಲಾ ಪಾಳು ಗುಡಿಯಂತಾಗಿದೆ .ಹಸಿವು ತನ್ನ ಕೆನ್ನಾಲಿಗೆ ಚಾಚಿತ್ತು. ಮನುಷ್ಯ ಮೃಗವಾಗಿದ್ದ. ಕೈಗೆ ಸಿಕ್ಕ ಪ್ರಾಣಿಯನ್ನು  ಹಸಿಹಸಿಯಾಗಿ ತಿನ್ನುವಷ್ಟರ ಮಟ್ಟಿಗೆ ಹೊಟ್ಟೆ, ಬುದ್ಧಿಯನ್ನು ಆಕ್ರಮಿಸಿತ್ತು. ಹೀಗಿರುವಂತಲ್ಲೊಬ್ಬ ಹೊಂಚು ಹಾಕಿ ಕುಳಿತಿದ್ದ. ಕತ್ತಲೆಯಾಗುತ್ತಿದೆ. ಯಾರದೂ ಸುಳಿವಿಲ್ಲ. ಅಸಹನೆ ಹಸಿವಿನಂತೆ ಹೆಚ್ಚುತ್ತಿದೆ. ಅಷ್ಟರಲ್ಲೇ ಯಾರೋ ಬರುತ್ತಿರುವ ಸದ್ದು. ಹಾವು ಕಪ್ಪೆಗಾಗಿ ತೋರಿಸುವ ನಿಶ್ಯಬ್ದ. ಆಕೃತಿ ಹತ್ತಿರವಾಗುತ್ತಿದೆ. ಮುನಿದ ಚಂದ್ರನ ಬೆಳಕು ಆಕೃತಿಯ ಚಹರೆಯನು ತೋರಿಸಲು ಅದು ಅವರಪ್ಪನದಾಗಿತ್ತು.
-3-
" ನೆನ್ನೆಯ ರಾತ್ರಿ! ಭಯಂಕರ! ಕನಸೇ ಅದು? ನನ್ನ ಕೆಪ್ಯಾಸಿಟಿಗೆ ಚಾಲೆಂಜ್. ಬರಿ ನಾಲ್ಕು ಪೆಗ್ಗಿಗೆ ನಾನು ಔಟಾಗುವದೇ ? ?ನನ್ನ ಕಾರು ಕೃಷ್ಣನ ಸುದರ್ಶನ ಚಕ್ರದಂತೆ, ನನ್ನ ಮಾತು ಮೀರುವದಿಲ್ಲ . ನಾನು ಅಪಘಾತದಲ್ಲಿ ಸಾಯುವನಲ್ಲ. ಅದೂ ಕನಸಿನಲ್ಲಿ ನಡೆದ ಥರ. ಸಾಧ್ಯವಿಲ್ಲ. ಕನಸಿನಲ್ಲಿ ನಡೆದಿದ್ದಾದರೂ  ಏನು  ?ಫೋನ್ ನಲ್ಲಿ ಮಾತಾಡುವಾಗ ಎದುರಿಗೆ ಬಂದ ಲಾರಿಯ ಹೆಡ್ ಲೈಟ್ ನ ಬೆಳಕು ನನ್ನ ಸ್ಟಿಯರಿಂಗ್ ನ ಹಿಡಿತ ತಪ್ಪಿಸುವದೇ? ಸಾಧವಿಲ್ಲ". ಅಷ್ಟರಲ್ಲೇ ನೆನಪಾಗುತ್ತೆ ಫೋನ್ ಬಾರಲ್ಲೇ ಮರೆತಿರುವೆನೆಂದು. ಗಕ್ಕನೆ ಬ್ರೇಕ್ ತುಳಿದ. 
ಮರುದಿನ ದಿನಪತ್ರಿಕೆಯಲ್ಲೊಂದು ಸುದ್ದಿ. " ಬ್ರೇಕ್ ಫೇಲ್ : ಸಾಫ್ಟವೇರ್ ಉದ್ಯೋಗಿ ಸಾವು"

-2-
ಸಮಯ ಹನ್ನೊಂದು ಗಂಟೆ. ಅಲ್ಲಲ್ಲಿ  ತೂರಾಡುವ  ಜನ ಮತ್ತು ತೂರಾಡದಿದ್ದರೂ ಕುಡುಕ-ಕೆಡುಕ ಜನಗಳ ಗುಂಪು. ಔಪಚಾರಿಕತೆಯ  ಪೋಲಿಸ್ ಬೂಟುಗಳ ಸದ್ದು. ಕುಡುಕರ ವಾದ ವಾಗ್ವಾದಗಳು ಅಸೆಂಬ್ಲಿ ಹಾಲ್ ನಂತೆಯೇ ತಾರಕಕ್ಕೇರಿತ್ತು. ಅದರಲ್ಲೊಬ್ಬ ಜಾಣ,ಸಭ್ಯ(?) ಕುಡುಕನೊಬ್ಬ ಹೀಗೆ ಹೇಳಿಕೊಳ್ಳುತ್ತಿದ್ದ. "ಎಡಗೈಲಿ ಗ್ಲಾಸ್ ಎತ್ತಿದರೆ ಬಲಗೈಗೆ ಗೊತ್ತಾಗಬಾರದು.ಕುಡಿದರೂ ಕುಡಿಯದಂತಿರಬೇಕು ಕುಡಿದಾಗ ಸಹನೆ ಇರಬೇಕು. ನಾಲಿಗೆ ಉದ್ದ ಆಗಬಾರದು. ಇವರಿಗೆಲ್ಲ ಬುಧ್ಧಿ ಇಲ್ಲ. ಕುಡಿದು, ಒದರಾಡಿ  ನಿಶೆ ಇಳಿಸಿಕೊಳ್ಳುತ್ವೆ. ಬುಧ್ಧಿಗೇಡಿಗಳು".  ಅಷ್ಟರಲ್ಲೇ ಫುಟಪಾತ್ ಮೇಲೆ ಮಲಗಿದವನಿಗೆ ಕಾಲು ತಗಲಿತ್ತು. ಅವನಂದ , " ಬೋ.. ಮಗನೆ, ಕಣ್ಣು ಕಾಣಲ್ವಾ? ". ಇವನಂಗಿಯ ತೋಳುಗಳು ಮೇಲೇರಿದ್ದವು.
-1-
ಕಂಪ್ಯೂಟರ್ ಅವನಿಗೆ ಸವಾಲು ಹಾಕುತ್ತಿತ್ತು. ಇವನು ಉತ್ತರಿಸಿ ಬೀಗುತ್ತಿದ್ದ.ಇವನು ಅದಕ್ಕೆ ಪಾಟೀಸವಾಲು ಹಾಕುತ್ತಿದ್ದ . ಅದೂ ಉತ್ತರಿಸುತ್ತಿತ್ತು. ಹೀಗೆ ಬರೀ ಉತ್ತರ - ಪ್ರಶ್ನೆಗಳಲ್ಲಿ ದಿನ-ರಾತ್ರಿ ಕಳೆಯುತ್ತಿದ್ದವು. ಬ್ಯಾಂಕ್ ಬ್ಯಾಲೆನ್ಸ್ ಏರುತ್ತಿತ್ತು. ಕಾರುಗಳು ಮನೆಯ ತುಂಬಿದವು. ಮಕ್ಕಳೂ ಕಂಪ್ಯೂಟರ್ ನ ಪ್ರಶ್ನೆಗಳಿಗೆ ಉತ್ತರಿಸಲಾರಂಭಿಸಿದವು  ಕೊನೆಗೊಂದು ದಿನ ಅವನು ಸತ್ತ. ಅವನ ಕಂಪ್ಯೂಟರ್ ಬೇರೆಯವರ ಜೊತೆ  ಪ್ರಶ್ನೋತ್ತರದಲ್ಲಿ ತೊಡಗಿತು, ಎಂದಿನಂತೆಯೇ.


Thursday, April 15, 2010

ಕಲೆ - ಬ(ಭ)ಲೆ

 ಗೆಳೆಯರೆ,
ನನ್ನ ಆತ್ಮೀಯ ಗೆಳೆಯನೊಬ್ಬ ಬಹಳ ಚಂದವಾಗಿ ಚಿತ್ರ ಬಿಡಿಸುತ್ತಾನೆ. ಆದರೆ ಅದನ್ನು ಯಾವಾಗಲೂ ಮುಚ್ಚಿಡುವ ಪ್ರಯತ್ನ ಅವನದು. ಅವನ ಕೆಲವು ಚಂದದ, ಮನ ಮುಟ್ಟುವ ಚಿತ್ರಗಳನ್ನು ನಾನು ನನ್ನ ಬ್ಲಾಗ್ನಲ್ಲಿ ತೋರಿಸುವ  ಆಸೆ ನನ್ನದು. ಇಡೀ ಚಂದ್ರನನ್ನು ಕನ್ನಡಿಯಲ್ಲಿ ತೋರಿಸುವ ಪ್ರಯತ್ನ. ಆ ಚಂದ್ರಮನ ಹೆಸರು ಪ್ರಶಾಂತ ಹತ್ತಿಯವರ್ .ಕಲೆ ಅವನದು. ಪ್ರೋತ್ಸಾಹಿಸುವ ಭಾರ ನಮ್ಮ ನಿಮ್ಮೆಲ್ಲರದು. ಏನಂತೀರಿ?




Saturday, April 3, 2010

ತುಮುಲ

ನನ್ನ ಮನಸಿನ ಕುದಿಯ ಕೇಳುವವರಾರು
ತುಂಬಿಹುದು ಜಗದಲ್ಲಿ ಆಧುನಿಕತೆಯ  ಕಾರು-ಬಾರು
ಒಲೆ ಮೇಲೆ ಇಟ್ಟಿರುವೆ ದುಬಾರಿ ಬೇಳೆಯ ಸಾರು
ಉಕ್ಕುವದರೊಳಗೆ ತೋರಿಸಲೆತ್ನಿಸುವೆ ನನ್ನ ಹೃದಯದ ಚೂರು.

ಅಂಗಿಯು ತುಂಬಿಹುದು ಹೊಗೆಯ ಕಮರು ಘಾಟು(ಗಂಡ)
ಕೇಳಿದರೆ ಕಣ್ಣಲ್ಲೇ ಚಾಟಿಯ ಏಟು.
ತಲೆಯ ಒಳಗೆಲ್ಲ ಬರೀ ಶೇರುಗಳ ರೇಟು
ರೂಮಿನಲಿ ಬಂದೊಡನೆ ಆರಿಸುತ ಲೈಟು.

ಮದಿರೆ ಮಾನಿನಿಯರ ಹಿಂದೆ ಓಡಿ ಓಡಿ(ಮಗ)
ವೇಗ ಸಾಕಾಗದೆಂದು ಕೊಂಡಿಹನು ಗಾಡಿ
ಹಿಂದೆ ಬರೆಸಿಹನು "ಸಾಧ್ಯವಾದರೆ ನನ್ನ ಹಿಡಿದು ನೋಡಿ"
ಮುಗುಳ್ನಕ್ಕು ಯಮನೆಂದ "ಹುಚ್ಚು ಖೋಡಿ".

ಪ್ರತಿಯೊಂದು ಮೆಸೇಜಿಗೂ ಕಣ್ಣಲ್ಲಿ ದೀವಳಿಗೆ(ಮಗಳು)
ರಾತ್ರಿಯಲಿ ಹೊರಟಿಹುದು ಪಿಸುಮಾತ ಮೆರವಣಿಗೆ
ಮುಖವು ಆಗಿಹುದು ಸುಣ್ಣ ಬಣ್ಣದ ಮಳಿಗೆ
ಬೆಂಬಲಕ್ಕೆ ನಿಂತಿಹುದು ಐಪಿಲ್ಲು ಗುಳಿಗೆ.

ಮುಪ್ಪಲ್ಲ, ಯೌವನವಲ್ಲ, ನಡುವಿನ ಭೀತಿ
ಮತಿಯಲ್ಲಿ ಎದ್ದಿಹುದು ಆಲೋಚನೆಗಳ ಕ್ರಾಂತಿ
ವೈದ್ಯರೆನ್ನುವರು ಇದಕೆ ಮನಸಿನ ಭ್ರಾಂತಿ
ಗಗನ ಕುಸುಮವು ಇಂದು ನೆಮ್ಮದಿ, ಶಾಂತಿ

ಸ್ಫೂರ್ತಿ: ವಿಶ್ವೇಶ್ವರ ಭಟ್ಟರವರ "ನೂರೆಂಟು ಮಾತು" ಅಂಕಣ (ವಿಜಯ ಕರ್ನಾಟಕ ೦೧-೦೪-೨೦೧೦)  

Wednesday, March 31, 2010

ಕಳ್ಳೆಕಾಯಿ, ಕಳ್ಳೆಕಾಯಿ

"ಕಳ್ಳೆಕಾಯಿ, ಕಳ್ಳೆಕಾಯಿ, ಬುಧ್ಧಿಜೀವಿ ಕಳ್ಳೆಕಾಯಿ, ಎಲ್ಲಾ ಬುಧ್ಧಿಜೀವಿಗಳು ಇದೇ ಕಳ್ಳೆಕಾಯಿ ತಿನ್ನೋದು.ಯಾರಿಗ ಬೇಕು? " 
"ಜಬ್ ಮಿಯಾ ಬೀವಿ ಹೋ ರಾಜಿ , ತೋ ಕ್ಯಾ ಕರೇಗಾ ಖಾಜಿ !"
ಈ ಶೀರ್ಷಿಕೆಗೆ ೨೦೧೦ ರ ಉತ್ತಮ ಶೀರ್ಷಿಕೆ ಬಂದರೆ ಅದಕ್ಕೆ ಅಚ್ಚರಿ ಪಡಬೇಡಿ. ಇದು ನಮ್ಮ ನೆಚ್ಚಿನ ಸಿಂಹರ ಲೇಖನ( ೨೭/೦೩/೨೦೧೦)ದ ಶೀರ್ಷಿಕೆ.
ಸಿಂಹಕ್ಕೆ ಮತ್ತೊಂದು ಗರಿ(!). ಆದರೆ ಅವರ ಲೇಖನವನ್ನು ಜೀರ್ಣಿಸಿಕೊಳ್ಳೋದು  ಸ್ವಲ್ಪ ಕಷ್ಟ.ಜೀರ್ಣಿಸಿಕೊಂಡರೆ ಹೊಟ್ಟೆ ಕೆಡುತ್ತೆ!. 
                ಜಗತ್ತಿಗೆ ಸಂಸ್ಕೃತಿ ಮತ್ತು ಸಂಭಂಧದ ಪರಿಕಲ್ಪನೆ ಕೊಟ್ಟಿದ್ದೇ ನಾವು.ಅಸಂಭದ್ದ  ಮತ್ತು  ಅಶ್ಲೀಲತೆಯನ್ನು ಮೈಗೂಡಿಸಿಕೊಂಡ ಎಷ್ಟೋ ನಾಗರಿಕತೆಗಳು ಮಣ್ಣಾಗಿದ್ದನ್ನು  ನಾವು ನೋಡಬಹುದು. ಇಷ್ಟಕ್ಕೂ ನಮ್ಮ ಸಿಂಹ ಏನು ಹೇಳ್ತಾರೆ? " ಹುಡುಗ ಹುಡುಗಿಯರು ತಮ್ಮ ಗುರಿ ಸಾಧನೆಗೆ ಬೇಗ ಮದುವೆಯಾಗೋಲ್ಲ. ಕೆಲವು ಜನ ಪಟ್ಟಣಕ್ಕೆ  ಅಥವಾ ದೂರದ ಊರಿಗೆ ಓದಲು ಹೋಗುತ್ತಾರೆ. ಹಾಸ್ಟೆಲ್ಲುಗಳಲ್ಲಿ ಉಳಿಯುತ್ತಾರೆ. ಹುಡುಗ ಹುಡುಗಿಯರ ಮಧ್ಯೆ ಸ್ನೇಹ ಬೆಳೆಯುತ್ತದೆ.ದೈಹಿಕ ಕಾಮನೆಗಳು ಅವರ ಸ್ನೇಹಡ ತಳಹದಿ ಮೇಲೆ ಮೊಳಕೆಯೊಡೆಯುತ್ತವೆ. ಮಾಗಿದ ವಯಸ್ಸು ಅದಕ್ಕೆ ಕಾರಣ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಮತ್ತು ಅದನ್ನು ಒಪ್ಪಿಕೊಳ್ಳುವ  ಅನಿವಾರ್ಯತೆ ಇಂದು ನಮ್ಮ ಮುಂದಿದೆ". 
ಡಾರ್ವಿನ್ ಥಿಯರಿಯಷ್ಟು ಕರಾರುವಾಕ್. ಅಲ್ಲ ಸಿಂಹ ಅವರೇ, ಹೀಗಂತ ಇಡೀ ಯುವಸಮೂಹವನ್ನು ತಪ್ಪು ದಾರಿಗೆಳೆಯುವದೆ? ಯಾವುದೇ ಅಡ್ಡಿಗಳಿಲ್ಲದೆ ಯುವ ಸಮೂಹ ಹಗ್ಗ ಬಿಚ್ಚಿದ ಎಮ್ಮೆ ಕೋಣಗಳಾದಾವು.ಭಾವನೆಗಳನ್ನು,ನೋವು ನಲಿವುಗಳನ್ನು ಹಂಚಿಕೊಂದಲ್ಲಿ ಅದನ್ನು ಸ್ನೇಹವೆಂದು ಹೇಳಬಹುದು. ಒಂದು ಹೆಜ್ಜೆ ಮುಂದೆ ಹೋದಲ್ಲಿ ಅದನ್ನು ಪ್ರೀತಿ ಎನ್ನಬಹುದು. ಇನ್ನೂ ಒಂದು ಹೆಜ್ಜೆ ಇಟ್ಟಲ್ಲಿ ಅದನ್ನು ಮದುವೆ ಎನ್ನಬಹುದು. ಈ ಎರಡನೇ ಮತ್ತು ಮೂರನೆ ಹೆಜ್ಜೆಗಳ ನಡುವೆ ದಾರಿ ತಪ್ಪಿದರೆ ಅದನ್ನು ಎಡವಟ್ಟು ಎನ್ನಬಹುದು,ಅಥವಾ ವಿವಾಹಪೂರ್ವ ಸಂಭಂಧ ಎನ್ನಬಹುದು. ಅದನ್ನೇ ನಮ್ಮ ಸರಕಾರ ಈಗ ಸಮ್ಮತಿಸಿದೆ. ಈ ಸಂಭಂಧಕ್ಕೆ ನಮ್ಮ ಶಬ್ದಕೋಶದಲ್ಲಿ ಉತ್ತಮ ಶಬ್ದಗಳೇ ಇಲ್ಲ. 
ಅಲ್ಲಾ ಸ್ವಾಮಿ, ಈಗಲೇ ನಾವು ಈ ವಿಭಕ್ತ ಕುಟುಂಬಗಳಿಂದ ಅನುಭವಿಸುತ್ತಿರೋದೆ ಸಾಕು. ತಂದೆ, ತಾಯಿ, ಅಜ್ಜ, ಅಜ್ಜಿ, ಅತ್ತೆ, ಮಾವ ಮುಂತಾದ ಸಂಭಂಧಗಳೇ ಕಡಿಮೆಯಾಗುತ್ತಿರುವ ದಿನಗಳಲ್ಲಿ ಈ ಅವ್ಯಕ್ತ ಕುಟುಂಬಗಳಿಂದ ಆಗುವ ಸಂಸ್ಕೃತಿ ನಾಶಕ್ಕೆ ಹೊಣೆ ಯಾರು? ಎಲ್ಲಾರು ಮೂಳೆ  ಕಡೀತಾರಾ? ಇನ್ಮೇಲೆ ಕಡಿದವರೆಲ್ಲ ಮೂಳೆ ಹಾರ  ಮಾಡ್ಕೊಂಡು ಸಂಭ್ರಮಿಸಬೇಕು. ಜಗತ್ತಿನ ಜನ ನಮ್ಮ ಸಂಸ್ಕೃತಿಯ ಅವನತಿಯನ್ನು ನೋಡಿ ನಗಬೇಕು. ಇದೇ ಅಲ್ವೇ ಅಭಿವೃದ್ಧಿಯ ಸಂಕೇತ. ಅವ್ರು ಮಾಡ್ತಾರೆ, ನಾವೂ ಮಾಡೋಣ. ಏನು ಹುಚ್ಚು ಸ್ವಾಮಿ. ಶಿಕ್ಷಣದಲ್ಲಿ ನೈತಿಕತೆ, ಮಾನವೀಯತೆ, ಸಂಸ್ಕೃತಿ,ಮತ್ತು ಅವಿಭಕ್ತ ಕುಟುಂಬಗಳಿಂದ ಆಗುತ್ತಿದ್ದ  ಉಪಯೋಗಗಳನ್ನು ಅಳವಡಿಸಿ ಮತ್ತೆ ಸಂಸ್ಕೃತಿ ಸೌಧವನ್ನು ಕಟ್ಟಬೇಕೆ ಹೊರತು ಇಂತಹ ಹೊಲಸು ಕಾನೂನುಗಳನ್ನಲ್ಲ .www.divorcerate.org ರವರ ಸರ್ವೇ ಪ್ರಕಾರ ಅಮೇರಿಕದಲ್ಲಿ ಶೇ ೫೦% ವಿವಾಹಗಳು ಮುರಿಯುತ್ತವೆ. ಆದರೆ ನಮ್ಮಲ್ಲಿ ಕೇವಲ ಶೇ.೧%. ಇದೂ ಕೂಡ ಇತ್ತೀಚಿನ ದಿನಗಳಲ್ಲಿ ಬೆಳವಣಿಗೆಯಾಗಿದ್ದು. ನಮ್ಮ ಮನೆ ನಮ್ಮ ಮೊದಲ ಪಾಠಶಾಲೆ. ಅಲ್ಲಿಂದ ನಾವು ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಬೆಳೆಸುವ ಪ್ರಯತ್ನ ಮಾಡೋಣ. 
ಒಬ್ಬ ಪತ್ರಕರ್ತ ಬರೀ ಅಂಕಿ ಅಂಶ, ಉತ್ತಮ ಶಬ್ದಜೋಡಣೆಯಿಂದ ಲೇಖನ ಬರೆದಲ್ಲಿ ಆಗುವ ಅನಾಹುತಗಳಿವು. ಬರೀ ರೋಚಕತೆಗೆ ಆಯುಷ್ಯ ಅಲ್ಪ ಮತ್ತು ಅಪಾಯಕಾರಿ. ಪ್ರತಿಯೊಂದು ಲೇಖನ, ಕವಿತೆ, ಕತೆ, ಕಾದಂಬರಿ ಹಿಂದೆ ಸಂವೇದನೆ ಮುಖ್ಯ. ಒಬ್ಬ ಲೇಖಕ ಓದುಗನ ಅಭಿರುಚಿಯನ್ನು  ಉತ್ತಮವಾಗಿಸಬೇಕು. ಇಲ್ಲವಾದಲ್ಲಿ ಅವನಿಗೂ ಕಸಬ್ ಗೂ ಯಾವುದೇ ವ್ಯತ್ಯಾಸವಿಲ್ಲ. ಕಸಬ್ ಕೇವಲ ಬೆರಳೆಣಿಕೆಯಷ್ಟು ಜನರನ್ನು ದೈಹಿಕವಾಗಿ  ಕೊಂದ. ಇವರೋ ಇಡೀ ಒಂದು ಸಮಾಜವನ್ನು ಹೊಲಸು ಮಾಡುತ್ತಾರೆ. ವಿಚಾರವಾದಿಗಳೇ, ಲೇಖಕರೇ, ಪತ್ರಕರ್ತರೇ, ಬುಧ್ಧಿಜೀವಿಗಳೇ ಕಡ್ಲೇಕಾಯಿ ತಿಂದಿದ್ದು ಸಾಕು. ನೀವೆನಂತೀರಿ? 

Saturday, March 27, 2010

ಸ್ಪೂರ್ತಿ

ಮೂಳೆ ತೊಗಲಿನ ತಡಿಕೆ, ಮೇಲೆ ಅಂಗಿಯ ಹೊದಿಕೆ,
ಸಿಂಹಿಣಿಯು ನಾಚಿತು ನಿನ್ನ ಕಟಿಯ ಕಂಡು.

ಗಾಂಡೀವ ಮರೆಯಾಗಿ ನಿನ್ನ ಹುಬ್ಬುಗಳಾಗಿ,
ಓಲಂಪಿಕ್    ರಿಂಗುಗಳು ಕಿವಿಗೆ ಲೋಲಾಕುಗಳಾಗಿ ,
ತಲೆ  ಬಾಗಿ ನಿಂತಿಹಳು ಶಿಲೆಯ  ಬಾಲೆ.

ನಾಗರದ ಮೊಟ್ಟೆಯಲಿ ವೃಶ್ಚಿಕದ  ಮರಿಯಿಂದು.
ಚೂಡಿ ,ಜೀನ್ಸು, ನೈಟಿಗಳೆಲ್ಲ ಒಣಮೈಯ ತಬ್ಬಿರಲು,
ಶ್ರೀ ಕೃಷ್ಣನೂ ಅಸಹಾಯ ಇಂದಿನ ದ್ರೌಪದಿಗೆ.

ಕೊನೆಯ ಮಾತೊಂದ ಹೇಳುವದ  ಮರೆತೆ,
ಕಡಿಮೆಯಾಗಿರಲು ಇಂದು  ಸ್ಪೂರ್ತಿಯ ಒರತೆ,
ಎಲ್ಲಿ ಹುಟ್ಟೀತು ರಸಮಯ ಕವಿತೆ?

Tuesday, March 16, 2010

ಒಂದು ಸಂವಾದ

ಮಲಗಿದ್ದೆ ನಾನಂದು, ಛಕ್ಕನೆ ಕುಳಿತೆದ್ದೆ,
ಬೆಚ್ಚಿದೆ ಪಕ್ಕದಲಿ ಕುಳಿತವನ ಕಂಡು.
"ಬೇರೆ ಯಾರೂ ಅಲ್ಲ, ನಿನ್ನದೇ ಆತ್ಮ,
ಬಂದಿಹೆನು ನಾ ನಿನ್ನ ಜೊತೆ ಮಾತನಾಡಲು."
ಬೆದರಿದ ಹರಿಣಿಯಂತೆ, ತೊದಲಿ ನಾ ಉಸುರಿದೆ,
"ಹೇಳು, ನಿನ್ನ ಮಾತು ಕೇಳಲು ನನಗೆ ಭಯವಿಲ್ಲ".
ಅದಕ್ಕೆ ಉತ್ತರವಾಗಿ ನನ್ನಾತ್ಮ ಹೀಗೆಂದು ಉತ್ತರಿಸೆ,
"ಹುಟ್ಟಿನಿಂದಲೇ  ನಾನು ನಿನ್ನೊಳಗೆ ಅಡಗಿಹೆನು,
ನಿನ್ನ ಸಾಧನೆಗಳಿಗೆಲ್ಲ ಪ್ರೇರಕನು ನಾನೇ.
ಬಳಪದಲಿರುವ  ಬೆಳಕು ತೋರಿಸಿದವ ನಾನು,
ಬಾಳ ಬಳಪವ ತೇಯ್ದವನು ನಾ.
ನಿನ್ನದೆನುವದೇನುಂಟು ? ನಿನ್ನೆದೆಯಲೇನುಂಟು?
ಚೈತನ್ಯನು ನಾ ನಿನಗೆ."
ನಾನಲ್ಲ ಮನಮೋಹನ, ಹೆದುರುವೆನೆ ಸುಶ್ಮಾತ್ಮಕೆ,
 ಗರ್ವದಿ  ಉತ್ತರಿಸಿದೆ,
"ಹೌದು. ಎಲ್ಲವು ನಿನ್ನದೇ. ನನ್ನದೇನೂ ಇಲ್ಲ.
ಈ ಕ್ಷಣವೇ ನಿಲಿಸುವೆನು ಈ ನನ್ನ ಉಸಿರ,
ತೆಗೆದುಕೋ ಈ ನನ್ನ ಬಿರುದು, ಆ ಕಂಠಿಸರ".

Wednesday, March 10, 2010

ಸ್ವಾತಿಮುತ್ತು

ಬಾನಿನ ಕಣ್ಣಂಚಿನಿಂದ ಹೊರಬಂದ ಆ ಹನಿಯ ಅಂಚಿಗೆ,
ಕೋಲ್ಮಿಂಚಿನ ಮಿಂಚು  ತಾಗಿ
ಸಂಚು ಕೊಂಚ ಕೊಂಚ ಕಂಡಿತೆನಗೆ .
ಆ ಹನಿಗೆ, ಲಂಚ ಕೊಟ್ಟು ಕೇಳಿದಾಗ, ಮನದ ಭಾವ ಬುಗ್ಗೆಯಲ್ಲಿ  ಸಂಚರಿಸುತ್ತಾ ...
ಗೊಣಗಿತ್ತು, ಆಗಬೇಕೆಂಬುದು ಚಿಪ್ಪಿನಲ್ಲಿ ಸ್ವಾತಿಮುತ್ತು.
                                                ಇಂದ,
                                                         ಪ್ರೀತಿ.

Thursday, March 4, 2010

ಪ್ರಕೃತಿಮಾತೆಗೊಂದು ಪತ್ರ

ಯುಗಾದಿಯ  ಸಂಧರ್ಭದಲ್ಲಿ  ಪ್ರಕೃತಿಮಾತೆಗೊಂದು ಪತ್ರ
ಹೊಸತು ಉಡುವ ಸಡಗರದಲ್ಲಿ  ಹಳೆಯದನ್ನು ಮರೆಯದಿರು,
ವಸನ ಹೊಸದಾದರೇನು ನೀನು ಹಳತು.

ಹುಟ್ಟುಹಬ್ಬವು ಇದು ನಿನಗೆ,
ಮರುಜನ್ಮವಂತೂ ಅಲ್ಲ,
ಇರುವ ಪಯಣವ ಮುಗಿಸು,
ಹೊಸತು ಬೇಕೇನೀಗ?

ಕಲ್ಲು ಮುಳ್ಳುಗಳ ಸಂತೆ ದಾರಿಯಲಿ ತುಂಬಿರಲು ,
ನಗೆಯು ನಗುತಿರಲಿ ನಿನ್ನ ತುಟಿಯ ಅಂಚಲ್ಲಿ,
ಗಾಯವು ಮಾಯುತಿರಲು , ನೋವ ಮರೆಯಿನ್ನು .
ಸಾಗುತಿರಲಿ  ಈ ನಿನ್ನ ಅನಂತ ಪಯಣ.

ನಿನ್ನ ದಾರಿಯಲ್ಲೇ ಬರುವ ಸಹಯಾತ್ರಿಕನು ನಾನು,
ಮುನ್ನಡೆಸು ನನ್ನನು ನನ್ನ ಗಮ್ಯದ ಕಡೆಗೆ.
ಜೀವನಾಧಾರವಾದ ಈ ನಿನ್ನ ಮಮಕಾರ
ಮರೆಯೆನು ನಾನು ಈ  ಮಹದುಪಕಾರ.

ಕೋಗಿಲೆಯ ಗಾನದಲಿ, ಮಾವಿನ ತಂಪಿನಲಿ,
ಆಚರಿಸು ಈ ನಿನ್ನ ಜನುಮದಿನ.
ಪ್ರೀತಿ ಪ್ರೇಮವ ಬೆಳೆಸಿ, ಮನುಕುಲವು ಇರುವಂತೆ ,
ಹರಸು ಈ ನಿನ್ನ ಕುಡಿಗಳನ್ನ.